ಇಂದಿನ ರಾಜಕಾರಣದಲ್ಲಿ ತತ್ವ, ಸಿದ್ದಾಂತ, ಆದರ್ಶಗಳು ಇನ್ನೂ ಉಳಿದಿವೆ. ಹಣ, ಹೆಂಡ ಹಂಚದೇ ಚುನಾವಣೆಗೆ ನಿಂತು ಗೆದ್ದೆಗೆಲ್ಲುವೆ ಎಂಬ ಆತ್ಮವಿಶ್ವಾಸದಿಂದ ಚುನಾವಣಾ ತಯಾರಿ ಆರಂಭಿಸಿದ್ದಾರೆ ರವಿ ಕೃಷ್ಣಾರೆಡ್ಡಿ. ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯನ್ನು ಆರಂಭಿಸಿ ಅದರ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ರವಿ ಕೃಷ್ಣಾರೆಡ್ಡಿ. 2018ರ ಚುನಾವಣೆಗೆ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. 43 ದಿನದಿಂದ ಕ್ಷೇತ್ರದಲ್ಲಿ ಸಂಚರಿಸಿ ಜನರನ್ನು ಭೇಟಿ ಮಾಡುತ್ತಿದ್ದಾರೆ.2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯನಗರ ಕ್ಷೇತ್ರದಿಂದ, 2013ರಲ್ಲಿ ಬಿಟಿಎಂ ಕ್ಷೇತ್ರದಿಂದ ಲೋಕಸತ್ತಾ ಅಭ್ಯರ್ಥಿಯಾಗಿ, 2014ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇಬೇಕು, ಗೆದ್ದು ರಾಜ್ಯದಲ್ಲಿ ಹೊಸ ರಾಜಕೀಯ ಮಾದರಿ ಸ್ಥಾಪಿಸಬೇಕು ಎಂಬ ಕನಸಿನೊಂದಿಗೆ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿರುವ ಅವರು ತಮ್ಮ ಕನಸು, ರಾಜಕೀಯ ಪರಿಸ್ಥಿತಿ, ಜಯನಗರದ ಸಮಸ್ಯೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.